Tuesday, January 1, 2019

ನಗರಕ್ಕಿಂದು ಎ. ಆರ್. ಮಣಿಕಾಂತ್

ನಗರಕ್ಕಿಂದು ಬದುಕಿನ ಬಾಂಧವ್ಯದ ಕಥೆಗಾರ
ಎ. ಆರ್. ಮಣಿಕಾಂತ್

Image result for a r manikanth


ಸಿದ್ಧಗಂಗಾ ವಿದ್ಯಾಸಂಸ್ಥೆಯ 49ನೇ ವಾರ್ಷಿಕ ಸಂಭ್ರಮದ ಮೊದಲ ದಿನದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಲಿರುವ ‘ಭಾವತೀರಯಾನ’ದ ಲೇಖಕರಾದ ಎ. ಆರ್. ಮಣಿಕಾಂತ್‍ರವರು ಜನಿಸಿದ್ದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆಯಿತನಹಳ್ಳಿ. ಓದಿದ್ದು ಮಂಡ್ಯದ ಪಿ.ಇ.ಎಸ್. ಕಾಲೇಜಿನಲ್ಲಿ ಬಿ.ಇ. ಆಟೋಮೊಬೈಲ್. ಮೈಸೂರಿನ ಮುಕ್ತ ವಿವಿಯಲ್ಲಿ ಎಂ.ಎ.(ಇಂಗ್ಲೀಷ್). ಒಲಿದಿದ್ದು ಪತ್ರ್ರಿಕೋದ್ಯಮ. ಹಾಯ್ ಬೆಂಗಳೂರ್, ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ, ಕನ್ನಡ ಪ್ರಭಗಳಲ್ಲಿ ಹೊಟ್ಟೆಪಾಡು ಮತ್ತು ಆತ್ಮಸಂತೋಷಕ್ಕಾಗಿ ದುಡಿಮೆ. ಸದ್ಯ ಉದಯವಾಣಿಯ ಬೆಂಗಳೂರು ಆವೃತ್ತಿಯಲ್ಲಿ ಪುರವಣಿ ಮುಖ್ಯಸ್ಥ. ‘ಉಭಯ ಕುಶಲೋಪರಿ ಸಾಂಪ್ರತ’, ‘ಹಾಡು ಹುಟ್ಟಿದ ಸಮಯ’, ‘ಈ ಗುಲಾಬಿಯು ನಿನಗಾಗಿ’, ‘ಭಾವತೀರಯಾನ’, ‘ನನ್ನ ಹಾಡು ನನ್ನದು’, ‘ಕಲ್ಲು-ಸಕ್ಕರೆ’ ಹಾಡು ಹುಟ್ಟಿದ ಸಮಯ ಇವೆಲ್ಲಾ ಓದುಗರ ಪ್ರೀತಿ-ಮೆಚ್ಚುಗೆ, ಅಭಿಮಾನಕ್ಕೆ ಪಾತ್ರವಾದ ಅಂಕಣ ಬರಹಗಳು. ಅಮ್ಮ ಹೇಳಿದ ಎಂಟು ಸುಳ್ಳುಗಳು, ಅಪ್ಪ ಅಂದ್ರೆ ಆಕಾಶ, ಭಾವತೀರಯಾನ, ಮನಸು ಮಾತಾಡಿತು, ಹಾಡು ಹುಟ್ಟಿದ ಸಮಯ, ಈ ಗುಲಾಬಿಯು ನಿನಗಾಗಿ, ಗಿಫ್ಟೆಡ್-ಪ್ರಕಟವಾಗಿರುವ ಪುಸ್ತಕಗಳು. ‘ಅಮ್ಮ ಹೇಳಿದ ಎಂಟು ಸುಳ್ಳುಗಳು’ ಅಪಾರ ಜನಪ್ರಿಯತೆಯನ್ನು, ಅತ್ಯಧಿಕ ಮಾರಾಟವನ್ನು ಕಂಡ ಕೃತಿ. 10 ವರ್ಷದ ಅವಧಿಯಲ್ಲಿ, ಈ ಪುಸ್ತಕದ 1,40,000 ಪ್ರತಿಗಳು ಮಾರಾಟ ಆಗಿರುವುದು ಕನ್ನಡ ಪುಸ್ತಕೋದ್ಯಮದಲ್ಲಿ ಒಂದು ದಾಖಲೆ. ಸೇಡಂನ ಪ್ರತಿಷ್ಠಿತ ಅಮ್ಮ ಪ್ರಶಸ್ತಿ, ಧಾರವಾಡದ ಬಸವರಾಜ ಹೊರಟ್ಟಿ ಪ್ರತಿಷ್ಠಾನದವರು ಕೊಡುವ ಅವ್ವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಈ ಪುಸ್ತಕಕ್ಕೆ ಸಂದಿವೆ. ಅಪ್ಪ ಅಂದ್ರೆ ಆಕಾಶ ಪುಸ್ತಕದ 70,000, ಭಾವತೀರಯಾನ 30,000, ಮನಸು ಮಾತಾಡಿತು 15,000, ಹಾಡು ಹುಟ್ಟಿದ ಸಮಯ ಹಾಗೂ ಈ ಗುಲಾಬಿಯು ನಿನಗಾಗಿ ಪುಸ್ತಕದ ತಲಾ 5000 ಪ್ರತಿಗಳು ಮಾರಾಟವಾಗಿವೆ. ಗಿಫ್ಟೆಡ್ ಪುಸ್ತಕಕ್ಕೆ ವರ್ಷದ ಶ್ರೇಷ್ಠ ಅನುವಾದಿತ ಪುಸ್ತಕವೆಂದು, 2018ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿಯು ಪ್ರಶಸ್ತಿ ನೀಡಿ ಗೌರವಿಸಿದೆ.

ದಾವಣಗೆರೆ ಜನರ ಪರವಾಗಿ ಓದುಗರ ಭಾವಕೋಶ ಮೀಟಿದ ಈ ಸರಳ, ಸಜ್ಜನ, ಪತ್ರಕರ್ತರಿಗೆ ಆತ್ಮೀಯ ಸ್ವಾಗತ ಬಯಸೋಣ..

No comments:

Post a Comment