Saturday, November 3, 2018

ರಾಷ್ಟ್ರೀಯ ದಾಖಲೆ ಮಾಡಿದ ಸಿದ್ಧಗಂಗಾ

ರಾಷ್ಟ್ರೀಯ ದಾಖಲೆ ಮಾಡಿದ ಸಿದ್ಧಗಂಗಾ ‘ಬನ್ನೀಸ್’ ಗ್ರೂಪ್
- ಮುರುಘರಾಜೇಂದ್ರ ಚಿಗಟೇರಿ ಶ್ಲಾಘನೆ

ದಾವಣಗೆರೆ - ನ. 3

ರಾಷ್ಟ್ರದಲ್ಲಿ ಯಾವ ಶಾಲೆಯ ಮಕ್ಕಳೂ ಮಾಡದ ದಾಖಲೆಯನ್ನು ಸಿದ್ಧಗಂಗಾ ಬನ್ನೀಸ್ ಗ್ರೂಪ್‍ನವರು ಮಾಡಿದ್ದಾರೆ. 3 ರಿಂದ 5 ವರ್ಷದೊಳಗಿನ ನರ್ಸರಿಯ ಪುಟಾಣಿಗಳು ಬನ್ನೀಸ್ ಎಂದು ಸ್ಕೌಟ್ ಮತ್ತು ಗೈಡ್ಸ್‍ನಲ್ಲಿ ಗುರುತಿಸಿಕೊಳ್ಳುತ್ತಾರೆ. ಸಿದ್ಧಗಂಗಾ ನರ್ಸರಿಯ 541 ಮಕ್ಕಳು ಬನ್ನೀಸ್ ಸಮವಸ್ತ್ರ ಧರಿಸಿ ಮೊಲಗಳಂತೆ ಜಿಗಿಯುತ್ತಾ ನರ್ತಿಸುವುದನ್ನು ನೋಡಿದ ದಾವಣಗೆರೆ ಜಿಲ್ಲಾ ಸ್ಕೌಟ್ ಮತ್ತು ಗೈಡ್ಸ್‍ನ ಮುಖ್ಯ ಆಯುಕ್ತರಾದ ಮುರುಘರಾಜೇಂದ್ರ ಚಿಗಟೇರಿಯವರು, ಸ್ಕೌಟ್ ಆಯುಕ್ತರಾದ ಎ. ಪಿ. ಷಡಾಕ್ಷರಪ್ಪನವರು ಮತ್ತು ಗೈಡ್ಸ್ ಆಯುಕ್ತರಾದ ಪುಟ್ಟಮ್ಮ ಮಹಾರುದ್ರಯ್ಯನವರು ಮಕ್ಕಳೊಂದಿಗೆ ಮಕ್ಕಳಾಗಿ ಹರ್ಷಿಸಿದರು. ಐನೂರಕ್ಕೂ ಹೆಚ್ಚು ಸಂಖ್ಯೆಯ ಬನ್ನೀಸ್ ಒಂದೇ ಶಾಲೆಯಲ್ಲಿರುವುದು ಒಂದು ರಾಷ್ಟ್ರೀಯ ದಾಖಲೆ ಎಂದು ಶ್ಲಾಘಿಸಿ ಈ ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರ, ಶಿಸ್ತು, ಸೇವಾ ಭಾವನೆಯನ್ನು ರೂಢಿಸಿದರೆ ದೇಶಕ್ಕೆ ಮಾದರಿ ಪ್ರಜೆಗಳಾಗುತ್ತಾರೆ. ಆ ನಿಟ್ಟಿನಲ್ಲಿ ಸಿದ್ಧಗಂಗಾ ಸಂಸ್ಥೆಯಲ್ಲಿರುವ ತರಬೇತಿ ಪಡೆದ ಹದಿಮೂರು ಬನ್ನೀಸ್ ಆಂಟಿಗಳು ಮಾರ್ಗದರ್ಶನ ಮಾಡಬೇಕೆಂದು ತಮ್ಮ ಉದ್ಘಾಟನಾ ಭಾಷಣದಲ್ಲಿ ಮುರುಘರಾಜೇಂದ್ರ ಚಿಗಟೇರಿಯವರು ಕರೆ ನೀಡಿದರು. ಸ್ಕೌಟ್, ಗೈಡ್ಸ್ ಮತ್ತು ಬನ್ನೀಸ್ ಅತ್ಯುತ್ತಮ ಸೇವೆ ಸಲ್ಲಿಸುತ್ತಿದ್ದು ಮೀಸಲಾತಿ ಕೋಟಾದಡಿ ಹೆಚ್ಚಿನ ಸರ್ಕಾರಿ ಸೀಟುಗಳನ್ನು ಇಲ್ಲಿನ ಮಕ್ಕಳು ಉನ್ನತ ಶಿಕ್ಷಣದಲ್ಲಿ ಪಡೆಯುತ್ತಿದ್ದಾರೆ ಎಂದು ಮುಖ್ಯ ಅತಿಥಿಗಳ ಸ್ಥಾನದಿಂದ ಸ್ಕೌಟ್‍ನ ಆಯುಕ್ತರಾದ ಎ.ಪಿ. ಷಡಾಕ್ಷರಪ್ಪನವರು ಮೆಚ್ಚುಗೆ ವ್ಯಕ್ತಪಡಿಸಿದರು.

ಗೈಡ್ಸ್‍ನ ಆಯುಕ್ತರಾದ ಪುಟ್ಟಮ್ಮ ಮಹಾರುದ್ರಯ್ಯನವರು ಹಲವಾರು ಸೂಕ್ತಿಗಳನ್ನು, ವಚನಗಳನ್ನು ತಿಳಿಸುತ್ತಾ ಮಾಡಿದ ಸಹಾಯ ಒಂದಿಲ್ಲ ಒಂದು ದಿನ ಪ್ರತಿಫಲ ನೀಡುತ್ತದೆ ಎಂದು ಕತೆಯ ಮೂಲಕ ಉದಾಹರಿಸಿದರು. ಜೀವನದ ಪ್ರತಿ ಸವಾಲನ್ನು ಧೈರ್ಯದಿಂದ ಎದುರಿಸಬೇಕು, ಸೇವೆಗೆ ಸದಾ ಸಿದ್ಧರಾಗಿರಬೇಕೆಂದು ಮಕ್ಕಳಿಗೆ ಕರೆ ನೀಡಿದರು.


ಅಧ್ಯಕ್ಷತೆಯನ್ನು ಸಂಸ್ಥೆಯ ಮುಖ್ಯ ಶಿಕ್ಷಕಿ ಜಸ್ಟಿನ್ ಡಿ’ಸೌಜ ವಹಿಸಿದ್ದರು. ಗೈಡ್ಸ್ ಶಿಕ್ಷಕಿ ಶಶಿಕಲಾ ಮತ್ತು ಬನ್ನೀಸ್ ಆಂಟಿಗಳು ಪ್ರಾರ್ಥನೆ ಮಾಡಿದರು. ಯುಕೆಜಿ ಮಕ್ಕಳು ಬನ್ನೀಸ್ ಸಮವಸ್ತ್ರದಲ್ಲಿ ದೇಶಭಕ್ತಿಗೀತೆಗೆ ನೃತ್ಯ ಮಾಡಿದರು. ಸ್ಕೌಟ್ ಮತ್ತು ಗೈಡ್ಸ್‍ನ ಮಕ್ಕಳು ದೇಶಭಕ್ತಿ ಗೀತೆಗಳನ್ನು ಹಾಡಿದರು. ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ಮಕ್ಕಳ ಈ ವಿನೂತನ ಕಾರ್ಯಕ್ರಮ ವೀಕ್ಷಿಸಿ ಸಂಭ್ರಮಿಸಿದರು.

Thursday, November 1, 2018

ಈಜುಬಾಲೆ ರೇವತಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ರಾಷ್ಟ್ರೀಯ ಅಸಾಧಾರಣ ಪ್ರತಿಭೆ-ರಾಜ್ಯದ ಏಕಲವ್ಯ ಪ್ರಶಸ್ತಿ ಪಡೆದ
ಅಂತರಾಷ್ಟ್ರೀಯ ಈಜುಬಾಲೆ ರೇವತಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ದಾವಣಗೆರೆ.  November 1,

ಈಜಿನಲ್ಲಿ ಅಪ್ರತಿಮ ಸಾಧನೆ ಮಾಡಿದ ರೇವತಿಯ ಪ್ರಶಸ್ತಿಗಳ ಸಾಲಿಗೆ ಇದೀಗ ದಾವಣಗೆರೆ ಜಿಲ್ಲಾ ಆಡಳಿತ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ನವೆಂಬರ್ 1ರ ಕರ್ನಾಟಕ ರಾಜ್ಯೋತ್ಸವದಂದು ಬೆಳಿಗ್ಗೆ 10 ಗಂಟೆಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಸಿದ್ಧಗಂಗಾ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿನಿ “ದಾವಣಗೆರೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ” ಪಡೆಯಲಿದ್ದಾಳೆ.


ಅಮೇರಿಕಾ, ಜರ್ಮನಿ, ಜೆಕ್ ರಾಷ್ಟ್ರ, ದುಬೈ ಮತ್ತು ಇಂಡೋನೇಷಿಯಾಗಳಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ರೇವತಿ ಎಂ. ನಾಯಕ ರಾಷ್ಟ್ರಮಟ್ಟದ ಅಸಾಧಾರಣ ಪ್ರತಿಭೆಯಾಗಿ 2017ರಲ್ಲಿ ಚಿನ್ನದ ಪದಕ ಪಡೆದಳು. ಈ ಪ್ರತಿಭೆಗೆ ಕರ್ನಾಟಕ ಸರ್ಕಾರ ಕ್ರೀಡಾಪಟುಗಳಿಗೆ ಮೀಸಲಾದ ಏಕಲವ್ಯ ಪ್ರಶಸ್ತಿ ನೀಡಿ ಪುರಸ್ಕರಿಸಿದೆ. ಜಾಗತಿಕ ಮಟ್ಟದ ದ್ವಿತೀಯ ಸ್ಥಾನದಲ್ಲಿರುವ ಏಷಿಯನ್ ಗೇಮ್ಸ್‍ನಲ್ಲಿ ಇಂಡೋನೇಷಿಯಾದಲ್ಲಿ ನಡೆದ ಈಜು ಸ್ಪರ್ಧೆಯಲ್ಲಿ ಕಳೆದ ತಿಂಗಳು ಭಾಗವಹಿಸಿರುವ ರೇವತಿ ನಾಯಕಳ ಪ್ರತಿಭೆ ಗುರುತಿಸಿ ಜಿಲ್ಲಾಡಳಿತ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ. ಕಿರಿಯ ವಯಸ್ಸಿನಲ್ಲಿ ಹಿರಿಯ ಸಾಧನೆ ಮಾಡಿದ ರೇವತಿಗೆ ಸಹಪಾಠಿಗಳು ಸಿದ್ಧಗಂಗಾ ವಿದ್ಯಾಸಂಸ್ಥೆಯ ಸ್ಥಾಪಕರಾದ ಎಂ. ಎಸ್. ಶಿವಣ್ಣ ಕಾರ್ಯದರ್ಶಿ ಹೇಮಂತ್, ನಿರ್ದೇಶಕರಾದ ಡಾ|| ಜಯಂತ್ ಮತ್ತು ಪ್ರಾಚಾರ್ಯರಾದ ಪ್ರಸಾದ್ ಬಂಗೇರರವರು ಅಭಿನಂದಿಸಿದ್ದಾರೆ.