Tuesday, August 16, 2022

75 th INDEPENDENCE DAY





 











ಸ್ವಾತಂತ್ರ ಸಂಭ್ರಮದ  75 ವರ್ಷಗಳ ಇತಿಹಾಸ  ತೆರೆದಿಟ್ಟ ಸಿದ್ದಗಂಗಾ ಶಾಲಾ ಕಾಲೇಜಿನ ಮಕ್ಕಳು

ಕ್ಷಣಕ್ಕೊಂದು ದೃಶ್ಯ , ಗಳಿಗೆಗೊಂದು ಘಟನೆ . ವೀಕ್ಷಕರು  ಕಣ್ಣು ಮಿಟುಕಿಸಲೂ  ಇಚ್ಛೆ ಪಡದಂತೆ  ಸಹಸ್ರಾರು ಮಕ್ಕಳ ನೃತ್ಯ  ವೈಭವವನ್ನು  ಇಂದು ನಗರದ ಕ್ರೀಡಾಂಗಣದಲ್ಲಿ  ಕಣ್ತುಂಬಿಕೊಂಡರು.  ಸಿದ್ದಗಂಗಾ ಸಂಸ್ಥೆಯ ಶಾಲಾ ಕಾಲೇಜಿನ ಎರಡು ಸಾವಿರಕ್ಕೂ ಹೆಚ್ಚು  ಮಕ್ಕಳು ಅಮೃತ ಮಹೋತ್ಸವಕ್ಕೆ  " ವಂದೇ ಮಾತರಂ " ನೃತ್ಯ ರೂಪಕದ  ಮೂಲಕ ದೇಶಭಕ್ತಿಯ ಸಂಚಲನ ಮೂಡಿಸಿದರು. 

ಕಾರ್ಗಿಲ್ ಯುದ್ಧ , ಪುಲ್ವಾಮ ಘಟನೆ, ಯೋಧರ ಹೋರಾಟದ ಮೂಲಕ ಅವರಿಗೆ ಶ್ರದ್ಧಾಂಜಲಿ  ಸಲ್ಲಿಸಿದರೆ , ಭಾರತೀಯ  ನೃತ್ಯ ಪರಂಪರೆಗಳನ್ನು  ಏಕ ಕಾಲದಲ್ಲಿ ಅನಾವರಣಗೊಳಿಸಿ  ವೈವಿಧ್ಯತೆಯಲ್ಲಿ ಏಕತೆ ಮೆರೆದರು. ಭರತನಾಟ್ಯ , ಮಣಿಪುರಿ ,ಕಥಕ್ಕಳಿ , ಪೂಜಾ ಕುಣಿತ , ನಂದಿಕೋಲು , ಜನಪದ  ನೃತ್ಯಗಳಲ್ಲಿ ಏಕ ಕಾಲದಲ್ಲಿ ಮಕ್ಕಳು ಗೀತೆಗೆ ತಕ್ಕ ಹೆಜ್ಜೆ ಹಾಕುತ್ತಾ ಇಡೀ  ಕ್ರೀಡಾಂಗಣವನ್ನು  ತ್ರಿವರ್ಣ ಧ್ವಜಮಯ  ಗೊಳಿಸಿದರು . ಪ್ರಾರಂಭದಲ್ಲಿ ವಿಜ್ಞಾನಿಗಳು  ಇಸ್ರೋ  ಸಂಸ್ಥೆಯಿಂದ  ರಾಕೆಟ್ ಉಡಾವಣೆಯನ್ನು  ಯಶಸ್ವಿಯಾಗಿ  ಮಾಡಿದರು . ನಂತರ ಇಡೀ ಭೂಮಂಡಲವನ್ನು  ವ್ಯಾಪಿಸಿದ  ಕರೋನಾ  ವಿರುದ್ಧ  ಭಾರತೀಯರು  ಹೋರಾಟ ನಡೆಸಿದ್ದು, ವಿಜ್ಞಾನಿಗಳು ಲಸಿಕೆ ಕಂಡು ಹಿಡಿದು ಕರೋನಾ ಮೆಟ್ಟಿ ನಿಂತ  ದೃಶ್ಯ  ಊಹೆಗೂ ಮೀರಿದ್ದಾಗಿತ್ತು.  ವೈದ್ಯರು  ಕರೋನಾ ರೋಗಿಗಳನ್ನು  ಉಳಿಸಲು  ನಡೆಸಿದ ಹೋರಾಟ ,ಕರೋನಾ ವೈರಸ್ ಗಳು  ಸ್ವೇಚ್ಚೆ ಯಾಗಿ  ಜನ ಜಂಗುಳಿಯನ್ನು  ಕಂಗಾಲಾಗಿಸಿದ ಮನಕಲುಕುವ ದೃಶ್ಯ ಎರಡು ವರ್ಷಗಳ  ಕರೋನಾ ಆಘಾತವನ್ನು ನೆನಪಿಸುವಂತೆ  ಮಾಡಿತು . ಕ್ರೀಡಾಂಗಣ ಸ್ತಬ್ಧವಾಗಿ  ಕೇವಲ ಚಪ್ಪಾಳೆ  ಶಬ್ದ  ಮಾತ್ರ  ಕೇಳುತಿತ್ತು . ದೃಶ್ಯಕ್ಕೆ  ತಕ್ಕ ಪರಿಕರ , ಕಟೌಟ್ ಗಳು ನೃತ್ಯ ರೂಪಕದ ಶೋಭೆ ಹೆಚ್ಚಿಸಿತು . ಹಿನ್ನಲೆಯಲ್ಲಿ  ಸುಮಾರು 900  ಬಾಲಕರು ಜೈಹಿಂದ್ ,ಇಂಡಿಯಾ ,ಅಬ್ದುಲ್ ಕಲಾಂ ,ಪಿ . ಎಸ್ . ಎಲ್ . ವಿ ,ಪುಲ್ವಾಮ  ಹೀಗೆ  ಸಂದರ್ಭಕ್ಕೆ  ತಕ್ಕಂತೆ  ಇಂಗ್ಲಿಷ್  ಅಕ್ಷರ  ಜೋಡಣೆ ನಡೆಸಿ ವೀಕ್ಷಕರನ್ನು  ಬೆರಗಾಗಿಸಿದರು. ಡಾll ಜಯಂತ್ ರವರ ಪರಿಕಲ್ಪನೆಯಲ್ಲಿ  ರೂಪುಗೊಂಡ ನೃತ್ಯ ರೂಪಕಕ್ಕೆ  ಸಂಸ್ಥೆಯ  ಎಲ್ಲ  ಶಿಕ್ಷಕ - ಶಿಕ್ಷಕಿಯರು  ಸಹಕರಿಸಿ  ಯಶಸ್ವಿಗೊಳಿಸಿ ಕೊಟ್ಟಿದ್ದು  ಪಾಲಕರ ಸಂಭ್ರಮ  ಇಮ್ಮಡಿಗೊಳಿಸಿತು .  ಕಣ್ಣಿಗೆ ಬಟ್ಟೆ ಕಟ್ಟಿಕೊಂಡು  ವಿಜ್ಞಾನಿ ಕಲಾಂ ಮತ್ತು ಸಾರಾಭಾಯಿ  ಅವರ ಬೃಹತ್ ಚಿತ್ರ ಮೂಡಿಸಿದ  ಮಕ್ಕಳ ಏಕಾಗ್ರತೆಗೆ  ವೀಕ್ಷಕರು ಬೆರಗಾದರು. 



 

No comments:

Post a Comment