Wednesday, November 26, 2025

ಸಿದ್ಧಗಂಗಾ ಸಂಸ್ಥೆಯಲ್ಲಿ ಸಂವಿಧಾನ ದಿನಾಚರಣೆ

ದಾವಣಗೆರೆ, ನವೆಂಬರ್‌ 26



ನಗರದ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆ ಆಚರಿಸಲಾಯಿತು. ಮುಖ್ಯ ಶಿಕ್ಷಕಿ ರೇಖಾರಾಣಿಯವರು ಸಂವಿಧಾನದ ಪೀಠಿಕೆಯನ್ನು ಮಕ್ಕಳಿಗೆ ಬೋಧಿಸಿದರು. ಶಾಲಾ-ಕಾಲೇಜಿನ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿ-ವಿದ್ಯಾರ್ಥಿನಿಯರು ತಮ್ಮ ಬಲಗೈ ಚಾಚಿ ಪೀಠಿಕೆಯನ್ನು ಪುನರುಚ್ಛರಿಸಿದರು. ಸಂವಿಧಾನದ ಮಹತ್ವ ಮತ್ತು ಕರಡು ಪ್ರತಿ ತಯಾರಿಸಿದ ಡಾ|| ಅಂಬೇಡ್ಕರ್ರವರ ತಂಡದ ಪರಿಚಯವನ್ನು ಮಾಡಿಕೊಡಲಾಯಿತು. ಡಾ|| ಬಿ.ಆರ್‌. ಅಂಬೇಡ್ಕರ್‌ ಮತ್ತು ಸಂವಿಧಾನ ಪೀಠಿಕೆ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಲಾಯಿತು.


ಮರೆಯಲಾಗದ ನೆನಪು




ಸದಾ ನಗುಮುಖ. ಹಣೆಯ ಮೇಲೆ ವಿಭೂತಿ. ಜಿಲ್ಲಾಧಿಕಾರಿಯಾದರೂ ಸರಳ ನಡೆ-ನುಡಿ. ಇದು ನಮ್ಮ ದಾವಣಗೆರೆ ಡಿ.ಸಿ ಆಗಿದ್ದ ಬೀಳಗಿ ಸರ್‌ರವರ ವ್ಯಕ್ತಿತ್ವ. ಕಛೇರಿಗೆ ಬರುವ ಎಲ್ಲರ ಅಹವಾಲುಗಳನ್ನು ಕೇಳಿ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದರು. ವೃದ್ಧರು, ಅಂಗವಿಕಲರಿಗೆ ವಿಶೇಷ ಕಾಳಜಿ ವಹಿಸುತ್ತಿದ್ದ ದಕ್ಷ, ಪ್ರಾಮಾಣಿಕ, ಜನಾನುರಾಗಿ ಅಧಿಕಾರಿ ಮಹಾಂತೇಶ್‌ ಬೀಳಗಿಯವರ ದುರ್ಮರಣ ತೀವ್ರ ದುಃಖ ತಂದಿದೆ. ಕೋವಿಡ್‌ ಸಂದರ್ಭದಲ್ಲಿ ಅವರ ಕಾರ್ಯಕ್ಷಮತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಅನೇಕ ಬಾರಿ ನಮ್ಮ ಸಂಸ್ಥೆಗೆ ಭೇಟಿ ನೀಡಿದ್ದ ಅವರ ನೆನಪು ಇನ್ನೂ ಹಸಿರಾಗೇ ಇದೆ.

2019 ರಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನೆಗೆ ಬಂದಾಗ ಸಂಸ್ಥೆಯ ಬಗ್ಗೆ ಅಭಿಮಾನ ವ್ಯಕ್ತಪಡಿಸಿದರಲ್ಲದೆ ತಮ್ಮ ಮಗಳು ಚೈತನ್ಯಳನ್ನು ನಮ್ಮ ಕಾಲೇಜಿಗೆ ಸೇರಿಸಿದ್ದರು. ನಮ್ಮ ಶಾಲಾ ಗೀತೆ “ಈ ಶಾಲೆಯೇ ನಮ್ಮ ಸ್ವರ್ಗ” ಬಹುವಾಗಿ ಇಷ್ಟಪಟ್ಟಿದ್ದರು. ಸ್ವತಃ ಗಾಯಕರಾದ ಬೀಳಗಿ ಸರ್‌ರವರು ಈ ಗೀತೆಯನ್ನು ಸಮಯ ಸಿಕ್ಕಾಗ ಮಗಳ ಜೊತೆಗೂಡಿ ಹಾಡಿ ಸಂಭ್ರಮಿಸುತ್ತೇನೆ ಎಂದು ಹೇಳುತ್ತಿದ್ದರು. 10 ನೇ ತರಗತಿ ಮಕ್ಕಳಿಗೆ ಪ್ರೇರಣದಾಯಕ ಮಾತುಗಳಿಂದ ಅವರಲ್ಲಿ ವಿಶ್ವಾಸ ಮೂಡಿಸಿದ್ದರು.

ಸಂಸ್ಥೆಯ ಸಂಸ್ಥಾಪಕರಾದ ಎಂ.ಎಸ್‌ ಶಿವಣ್ಣನವರ ಸರಳತೆಯನ್ನು ಮೆಚ್ಚಿದ್ದರು. ಅವರು ಲಿಂಗೈಕ್ಯರಾದಾಗ ಸಾಂತ್ವನದ ನುಡಿಗಳಿಂದ ನಮ್ಮಲ್ಲಿ ಧೈರ್ಯ ತುಂಬಿದ್ದರು. ಕೋವಿಡ್‌ ಸಂದರ್ಭದಲ್ಲಿ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ ಸಹಾಯದಿಂದ ಸಂಸ್ಥೆ 10 ಆಕ್ಸಿಜನ್‌ ಕಾನ್ಸಂಟ್ರೇಟರ್‌ಗಳನ್ನು ಸಮರ್ಪಿಸುವ ಸಂದರ್ಭದಲ್ಲಿ ಸಂಸ್ಥೆಯ ಸೇವಾಕಾರ್ಯವನ್ನು ಮುಕ್ತವಾಗಿ ಶ್ಲಾಘಿಸಿದ್ದರು. ಸಂಸ್ಥೆವತಿಯಿಂದ ಒಂದು ಸಾವಿರ ದಿನಸಿ ಪ್ಯಾಕೇಟ್ಗಳನ್ನು ಹಂಚುವ ಸಂದರ್ಭದಲ್ಲಿ ನಮ್ಮೊಡನೆ ಇದ್ದರು. ದಾವಣಗೆರೆಯಿಂದ ವರ್ಗಾವಣೆಗೊಂಡು ಬೆಂಗಳೂರಿಗೆ ಒಲ್ಲದ ಮನಸ್ಸಿನಿಂದ ತೆರಳಿದ್ದರು. ಮನೆಗೆ ಭೇಟಿಕೊಟ್ಟಾಗ ತಮ್ಮ ವೃದ್ಧ ತಾಯಿ ಮತ್ತು ಅಣ್ಣನನ್ನು ಪರಿಚಯಿಸಿ ಪತ್ನಿಯಿಂದ ಫಲಹಾರ ಕೊಡಿಸಿ ಮಗಳ ಭವಿಷ್ಯದ ಬಗ್ಗೆ ತಮ್ಮ ಕನಸನ್ನು ಹಂಚಿಕೊಂಡರು. ಬೆಂಗಳೂರಿಗೆ ಹೋದ ನಂತರವೂ ಸಂಸ್ಥೆಯ ಒಡನಾಟ ಮರೆಯಲಿಲ್ಲ. ಆನಗೋಡಿನ ಶಿವಣ್ಣನವರ ಸ್ಮಾರಕದ ಉದ್ಘಾಟನೆ ಸಂದರ್ಭದಲ್ಲಿ ಸಮಾರಂಭದಲ್ಲಿ ಭಾಗವಹಿಸಿ ತಮ್ಮ ಪ್ರೀತಿ ವ್ಯಕ್ತಪಡಿಸಿದರು. ಸಂಸ್ಥೆಯ ವಾರ್ಷಿಕ ಸಮಾರಂಭದಲ್ಲಿ ಕಾರ್ಯಬಾಹುಳ್ಯದ ನಡುವೆಯೂ ಬಿಡುವು ಮಾಡಿಕೊಂಡು ನಮ್ಮ ಸಂಭ್ರಮ ಹೆಚ್ಚಿಸಿದ್ದರು. ದಾವಣಗೆರೆಯನ್ನು ಅವರು ಬಹಳವಾಗಿ ಪ್ರೀತಿಸುತ್ತಿದ್ದರು.ಹೆಬ್ಬಾಳು ಟೋಲ್‌ ಬಂತು ಅಂದ್ರೆ ನನಗೆ ಒಂಥರಾ ವೈಬ್ರೇಷನ್‌ ಆಗುತ್ತೆ, ದಾವಣಗೆರೆಯ ಜನರ ಪ್ರೀತಿ ನಾನು ಎಂದೂ ಮರೆಯಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದರು.
ಜನರ ಕಷ್ಟಗಳನ್ನು ಆಲಿಸುತ್ತಾ, ಯುವಜನಾಂಗವನ್ನು ಹುರಿದುಂಬಿಸುತ್ತಾ ಅವರಲ್ಲಿ ಆತ್ಮ ವಿಶ್ವಾಸ ತುಂಬುತ್ತಿದ್ದ ಬೀಳಗಿ ಸರ್‌ ಇನ್ನೆಂದೂ ನಮಗೆ ಕಾಣಲು ಸಿಗುವುದಿಲ್ಲ ಎಂಬ ಸಂಕಟ ನಡುಕ ಹುಟ್ಟಿಸುತ್ತಿದೆ.

ಸಹೃದಯಿ ವ್ಯಕ್ತಿಗೆ ಎಂತಹ ದುರ್ಮರಣ! ವಿಧಿಯ ಕ್ರೂರ ದೃಷ್ಠಿ ಮಹಾಂತೇಶ್‌ ಬೀಳಗಿ ಸರ್‌ರವರನ್ನು ಆಹುತಿ ತೆಗೆದುಕೊಂಡಿದೆ. ಮಗಳನ್ನು ತಮ್ಮಂತೆಯೇ IAS ಮಾಡಿಸಬೇಕೆಂಬ ಅದಮ್ಯ ಆಸೆ ಕೈಗೂಡುವ ಮೊದಲೇ ಕಣ್ಣುಚ್ಚಿ ಎಲ್ಲರ ಕಣ್ಣಲ್ಲಿ ನೀರು ಬರಿಸಿದ್ದಾರೆ. ದಾವಣಗೆರೆ ಕಂಡ ಇಂತಹ ಸೇವಾಧಾರಿ ಅಧಿಕಾರಿ ಅಕಾಲದಲ್ಲಿ ಶಾಶ್ವತ ವಿದಾಯ ಕೋರಿದ್ದು ವಿಧಿಯ ವಿಪರ್ಯಾಸ. ಭಗವಂತ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ. ಅವರಆತ್ಮ ಚಿರಶಾಂತಿ ಪಡೆಯಲಿ.

Friday, November 21, 2025

“ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಶ್ರೀ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿಗೆ ಚಾಂಪಿಯನ್‌ ಪಟ್ಟ”


ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ಬೆಂಗಳೂರು ಇವರ ಆದೇಶದನ್ವಯ 2025-26 ನೇ ಸಾಲಿನ ಶೈಕ್ಷಣಿಕ ವರ್ಷದ 
ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ದಾವಣಗೆರೆ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಹಾಗೂ ಪಠ್ಯೇತರ ಚಟುವಟಿಕೆಗಳ ಸ್ಪರ್ಧೆಗಳನ್ನು ಉಪನಿರ್ದೇಶಕು, ದಾವಣಗೆರೆ ಜಿಲ್ಲೆ ಇವರ ಆದೇಶದಂತೆ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ ಹಾಗೂ ಶ್ರೀ ಸಿದ್ಧಗಂಗಾ ಪದವಿ ಪೂರ್ವ ಕಾಲೇಜು ಇವರ ಸಹಯೋಗದೊಂದಿಗೆ ದಿನಾಂಕ 21-11-2025 ರ ಶುಕ್ರವಾರದಂದು ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಉದ್ಘಾಟನಾ ಸಮಾರಂಭವು ಅಂದು ಬೆಳಿಗ್ಗೆ 10 ಗಂಟೆಗೆ ಆರಂಭವಾಯಿತು. ಶ್ರೀ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ನಿರ್ದೇಶಕರಾದ ಡಾ|| ಜಯಂತ್‌ ಡಿ ಎಸ್ ಉದ್ಘಾಟಕರಾಗಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಶ್ರೀ ಪಳನಿವೇಲು ಡಿ., ಉಪನಿರ್ದೇಶಕರು, ದಾವಣಗೆರೆ ಇವರು ಅಧ್ಯಕ್ಷತೆ ವಹಿಸಿದ್ದರು. ಶ್ರೀ ಓಹಿಲೇಶ್ವರ ಎನ್‌, ಅಧ್ಯಕ್ಷರು, ಪ್ರಾಚಾರ್ಯರ ಸಂಘ, ಶ್ರೀ ಶಿವಪ್ಪ ಜೆ, ಕಾರ್ಯದರ್ಶಿಗಳು, ಪ್ರಾಚಾರ್ಯರ ಸಂಘ, ಶ್ರೀ ಸುರೇಶ ಆರ್., ಪ್ರಾಚಾರ್ಯರು, ಶ್ರೀಮತಿ ವಾಣಿಶ್ರೀ, ಪ್ರಾಚಾರ್ಯರು ವೇದಿಕೆಯನ್ನು ಅಲಂಕರಿಸಿದ್ದರು.

ಪ್ರಥಮ ಹಾಗೂ ದ್ವಿತೀಯ ಪಿಯುಸಿ ಹಂತದ 11 ವಿವಿಧ ಸ್ಪರ್ಧೆಗಳಿಗೆ ದಾವಣಗೆರೆ ಜಿಲ್ಲೆಯ 41 ಪದವಿ ಪೂರ್ವ ಕಾಲೇಜುಗಳಿಂದ ಸುಮಾರು 580 ಸ್ಪರ್ಧಾರ್ಥಿಗಳು ಭಾಗವಹಿಸಿದರು. ಸಂಜೆ 4 ಗಂಟೆ ಸಮಾರೋಪ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಸಮಾರಂಭದಲ್ಲಿ ಉಪನಿರ್ದೇಶಕರಾದ(ಪದವಿ ಪೂರ್ವ) ಶ್ರೀ ಪಳನಿವೇಲು ಡಿ. ಇವರು ವಿದ್ಯಾರ್ಥಿಗಳನ್ನು ಕುರಿತು ಉತ್ತಮವಾಗಿ ಅಭ್ಯಾಸ ಮಾಡಲು ಹಲವು ದಾರಿಗಳಿದ್ದು, ಸರ್ಕಾರವು ವಿವಿಧ ಅವಕಾಶಗಳನ್ನು ಕಲ್ಪಿಸಿದೆ ಅದನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ವಿಜೇತ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳು ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು ಎನ್ನುವುದರ ಕುರಿತು ಸೂಕ್ತ ಸಲಹೆ ನೀಡಿ, ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಈ ಸಂದರ್ಭದಲ್ಲಿ ಶ್ರೀ ಓಹಿಲೇಶ್ವರ, ಶ್ರೀ ಹೇಮಂತ್‌ ಡಿ.ಎಸ್.‌, ಶ್ರೀಮತಿ ಗಾಯಿತ್ರಿ ಚಿಮ್ಮಡ್‌, ಶ್ರೀಮತಿ ವಾಣಿಶ್ರೀ, ಶ್ರೀ ಸುರೇಶ ಆರ್‌, ಶ್ರೀ ಶಿವಪ್ಪ ಜೆ, ಶ್ರೀ ಭೀಮ ಕುಮಾರ ಜೆ.ವಿ ಇವರುಗಳೂ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮುಂದಿನ ಹಂತಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ಶುಭ ಕೋರಿದರು.

ದಾವಣಗೆರೆ ಜಿಲ್ಲೆಯ ವಿವಿಧ ಕಾಲೇಜುಗಳಿಂದ ಆಗಮಿಸಿದ ಸ್ಪರ್ಧಾರ್ಥಿಗಳಲ್ಲಿ ಶ್ರೀ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ

ವಿದ್ಯಾರ್ಥಿಗಳಾದ ದ್ವಿತೀಯ ಪಿಯುಸಿ ಹಂತದಲ್ಲಿ ಭಾವಗೀತೆ ಸ್ಪರ್ಧೆಯಲ್ಲಿ ವರುಣ ಎಂ ಹಾಗು ಜಾನಪದ ನೃತ್ಯ ಸ್ಪರ್ಧೆಯಲ್ಲಿ ಉಷಾರಾಣಿ ಎಂ, ಪ್ರಥಮ ಸ್ಥಾನ ಪಡೆದಿರುತ್ತಾರೆ. ಏಕಪಾತ್ರಾಭಿನಯ ಸ್ಪರ್ಧೆಯಲ್ಲಿ ಕವನ ಕೆ ಎನ್‌, ಆಂಗ್ಲ ಮಾಧ್ಯಮ ಪ್ರಬಂಧ ಸ್ಪರ್ಧೆಯಲ್ಲಿ ಸಿಂಧು ಡಿ ಜಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಆಂಗ್ಲ ಮಾಧ್ಯಮ ಚರ್ಚಾ ಸ್ಪರ್ಧೆಯಲ್ಲಿ ಅನುಷಾ ಕೆ ಎಸ್‌ ಹಾಗೂ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಣವ್‌ ದಿಗ್ಗಾವಿ ಹಾಗೂ ಅನಂತಸೇನ ಬಿ ಎಂ ತೃತೀಯ ಸ್ಥಾನ ಪಡೆದಿರುತ್ತಾರೆ. ಪ್ರಥಮ ಪಿಯುಸಿಯ ಹಂತದಲ್ಲಿ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಮಾನ್ಯಶ್ರೀ ಎಂ ನಾಡಿಗರ್‌, ಏಕಪಾತ್ರಾಭಿನಯ ಸ್ಪರ್ಧೆಯಲ್ಲಿ ಶಶಾಂಕ ಈರಪ್ಪ ತೆಪ್ಪದ್, ಕನ್ನಡ ಮಾಧ್ಯಮ ಚರ್ಚಾ ಸ್ಪರ್ಧೆಯಲ್ಲಿ ವೇದ ಪ್ರಕಾಶ್‌ ಅಜ್ಜಂನವರ್‌, ಆಂಗ್ಲ ಮಾಧ್ಯಮ ಚರ್ಚಾ ಸ್ಪರ್ಧೆಯಲ್ಲಿ ಹುಸ್ನ ಎನ್‌ ಇವರುಗಳು ಭಾಗವಹಿಸಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಈ ಎಲ್ಲಾ ಕಾರ್ಯಕ್ರಮಗಳ ಸಂಚಾಲಕರಾದ ಡಾ ಧನಂಜಯಪ್ಪ ಬಿ ಎನ್‌, ಶ್ರೀ ಸದಾಶಿವ ಹೊಳ್ಳ, ಶ್ರೀ ಸಂತೋಷ್‌ ಎಸ್‌ ಹಾಗೂ ಎಲ್ಲಾ ಉಪನ್ಯಾಸಕ ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದರು.

Tuesday, November 18, 2025

ರಾಷ್ಟ್ರೀಯ ಸ್ಕೌಟ್ಸ್ ಮತ್ತು ಗೈಡ್ಸ್ ಜಾಂಬೂರಿ


 ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಜಿಲ್ಲಾ ಸಂಸ್ಥೆ ದಾವಣಗೆರೆ.ದಿನಾಂಕ 15-11-2025 ರಂದು  ರಾಷ್ಟ್ರೀಯ ಜಾಂಬೂರಿ ಯಲಿ ಭಾಗವಹಿಸುತ್ತಿರುವ ದಾವಣಗೆರೆ ಜಿಲ್ಲೆಯ ಸ್ಕೌಟ್ ಮತ್ತು ಗೈಡ್ ವಿದ್ಯಾರ್ಥಿಗಳಿಗೆ ಜಿಲ್ಲಾ ಮುಖ್ಯ ಆಯುಕ್ತರಾದ ಶ್ರೀ ಮುರುಘ ರಾಜೇಂದ್ರ ಜೆ ಚಿಗಟೇರಿ ರವರು ವಿದ್ಯಾರ್ಥಿಗಳಿಗೆ ಶುಭ ಕೋರಿದರು ಈ ಸಂದರ್ಭದಲ್ಲಿ ಶ್ರೀ ಎಪಿ ಷಡಕ್ಷರಪ್ಪ ಜಿಲ್ಲಾ ಆಯುಕ್ತರು ಸ್ಕೌಟ್ ಮತ್ತು ಶ್ರೀಮತಿ ರೇಖಾ ರಾಣಿ ಜಿಲ್ಲಾ ಸ್ಥಾನಿಕ ಆಯುಕ್ತರು ಗೈಡ್ ಮತ್ತು ಶ್ರೀಮತಿ ಸುಖವಾಣಿ ಜಿಲ್ಲಾ ಸಹಕಾರ್ಯದರ್ಶಿ ಹಾಗೂ ಶ್ರೀಮತಿ ಅಶ್ವಿನಿ SGV , ಶ್ರೀ ವಿಜಯ್ ದಕ್ಷಿಣ ವಲಯ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ, ಶ್ರೀ ಮಹೇಶ್ ಸಿದ್ದಗಂಗಾ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ , ಶ್ರೀ ನಿಂಗರಾಜ್ ಸ್ಕೌಟ್ ಮಾಸ್ಟರ್  ಶ್ರೀಮತಿ ಆರೋಗ್ಯಮ್ಮ ಲೇಡೀ  ಸ್ಕೌಟ್ ಮಾಸ್ಟರ್ , ಶ್ರೀಮತಿ ವೇದಾವತಿ  ಗೈಡ್ ಕ್ಯಾಪ್ಟನ್, ಕು ತೇಜಸ್ವಿನಿ ಗೈಡ್ ಕ್ಯಾಪ್ಟನ್ ರವರು ಉಪಸ್ಥಿತರಿದ್ದರು.


Saturday, November 15, 2025

ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಮಕ್ಕಳಿಂದ ಬಾ. ಮ. ವಿರಚಿತ “ಒಂದು ಕಾಡಿನ ಕಥೆ” ನಾಟಕ ಪ್ರದರ್ಶನ

ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು, ಇವರು ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಸಹಯೋಗದಲ್ಲಿ “ಮಕ್ಕಳ ರಂಗ ತರಬೇತಿ ಶಿಬಿರ” ಆಯೋಜಿಸಿದರು. ಈ ಶಿಬಿರದಲ್ಲಿ ಬಿ.ಇ ಪದವೀಧರೆ ಹಾಗೂ ಹೆಗ್ಗೋಡು ರಂಗ ತರಬೇತಿ ಕೇಂದ್ರದ ಡಿಪ್ಲೊಮೋ ಪದವೀಧರೆ ಪ್ರಜ್ಞಾ ನೀಲಗುಂದ ಅವರು ಒಂದು ತಿಂಗಳ ಕಾಲ ಯಶಸ್ವಿಯಾಗಿ ಮಕ್ಕಳಿಗೆ ತರಬೇತಿ ನೀಡಿದ್ದಾರೆ.

        

ಶಿಬಿರದಲ್ಲಿ ಮೂವತ್ತಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡು ತರಬೇತಿ ಪಡೆದಿದ್ದಾರೆ. ಶಿಬಿರದಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ಬಾ. ಮ. ಬಸವರಾಜಯ್ಯ ಅವರು ರಚಿಸಿರುವ  “ಒಂದು ಕಾಡಿನ ಕಥೆ”  ನಾಟಕ  ಕಲಿತಿದ್ದು 

ದಿನಾಂಕ   18-11-2025 ರ ಮಂಗಳವಾರ ಸಂಜೆ 6.30 ಕ್ಕೆ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಬಯಲು ರಂಗಮಂದಿರದಲ್ಲಿ ಪ್ರದರ್ಶಿಸಲಿದ್ದಾರೆ.

      

ಶಿಬಿರದ ಸಮಾರೋಪ ಹಾಗೂ ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ದಾವಣಗೆರೆ ಜಿಲ್ಲಾಧಿಕಾರಿಗಳಾದ ಜಿ.ಎಂ. ಗಂಗಾಧರ ಸ್ವಾಮಿ ಅವರು ಉದ್ಘಾಟಿಸಲಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿ ರಿಜಿಸ್ಟ್ರಾರ್‌ ನೀಲಮ್ಮನವರು ಶಿಬಿರದ ಸಮಾರೋಪ ಭಾಷಣ ಮಾಡಲಿದ್ದು, ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಮುಖ್ಯಸ್ಥರಾದ ಜಸ್ಟಿನ್‌ ಡಿʼಸೌಜ ಅಧ್ಯಕ್ಷತೆ ವಹಿಸಲಿದ್ದಾರೆ. ನಾಟಕ ಅಕಾಡೆಮಿ ಸದಸ್ಯರುಗಳಾದ ರವೀಂದ್ರನಾಥ್‌ ಸಿರಿವರ, ವಿಶ್ವನಾಥ ರೆಡ್ಡಿ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

      

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಪ್ರಜಾವಾಣಿ ಪತ್ರಿಕೆಯ ಸ್ಥಾನಿಕ ಸಂಪಾದಕ ಸಿದ್ದಯ್ಯ ಹಿರೇಮಠ, ಪ್ರತಿಮಾ ಸಭಾದ ಪ್ರಧಾನ ಕಾರ್ಯದರ್ಶಿ ಬಿ.ಎನ್‌, ಮಲ್ಲೇಶ್‌ ಹಾಗೂ ನೀವು-ನಾವು ತಂಡದ ಮುಖ್ಯಸ್ಥ ರಂಗಕರ್ಮಿ ಎಸ್.‌ ಎಸ್‌. ಸಿದ್ಧರಾಜು ಗೌರವ ಉಪಸ್ಥಿತರಿರುತ್ತಾರೆ.

      


ನಾಟಕದ ಕಥಾ ಹಂದರ: ಮನುಷ್ಯರು ದಿನೇ ದಿನೇ ಕಾಡು ನಾಶಮಾಡುತ್ತಾ ವನ್ಯಪ್ರಾಣಿ ಸಂಕುಲಕ್ಕೆ ನೆಲೆ ಇಲ್ಲದಂತೆ ಮಾಡುತ್ತಿರುವುದನ್ನು ಕಂಡು “ಕಾಡು ಪ್ರಾಣಿಗಳು ಮತ್ತು ಊರು ಪ್ರಾಣಿಗಳು” ಒಟ್ಟುಗೂಡಿ ಮನುಷ್ಯರ ವಿರುದ್ಧ ಮುಷ್ಕರ ಮಾಡುತ್ತವೆ. ಕಾಡು ಹಾಗೂ ಪರಿಸರ ನಾಶದಿಂದ ಆಗುವ ವಿನಾಶದ ಬಗ್ಗೆ ಪಾಠ ಹೇಳುತ್ತವೆ.. ಹಾಡು-ನೃತ್ಯಗಳ ಸಂಯೋಜನೆಯೊಂದಿಗೆ ನಾಟಕ ಸಿದ್ಧಪಡಿಸಲಾಗಿದೆ. ನಾಟಕಾಸಕ್ತರು ಮಕ್ಕಳು ಪ್ರದರ್ಶಿಸುವ ಈ ನಾಟಕ ವೀಕ್ಷಿಸಲು ಮನವಿ ಮಾಡಿದ್ದಾರೆ.

Saturday, November 8, 2025

ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಕನಕ ಜಯಂತಿ ಆಚರಣೆ


ದಾವಣಗೆರೆ, ನಂ. 8

ನಗರದ ಸಿದ್ಧಗಂಗಾ ಶಾಲಾ-ಕಾಲೇಜುಗಳಲ್ಲಿ ಇಂದು ಕನಕದಾಸರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಪ್ರಿಕೆಜಿಯ ಪುಟಾಣಿ ಭುವಿತ್‌ ಕನಕದಾಸರ ವೇಷ ಧರಿಸಿ ಎಲ್ಲರ ಗಮನ ಸೆಳೆದನು. 2 ನೇ ತರಗತಿ ಬಾಲಕ ಜಯಸೂರ್ಯಸ್ವಾಮಿ ಕನಕದಾಸರ ಪ್ರಸಿದ್ಧ “ದಾಸನಾಗು ವಿಶೇಷನಾಗು” ಕೀರ್ತನೆ ಹಾಡಿದನು. 4 ನೇ ತರಗತಿ ಬಾಲಕಿ ಆರಾಧ್ಯ ಕನಕದಾಸರ ಜೀವನ ಚರಿತ್ರೆಯನ್ನು ಸಂಕ್ಷಿಪ್ತವಾಗಿ ಎಲ್ಲರಿಗೂ ತಿಳಿಸಿಕೊಟ್ಟಳು. ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಭಕ್ತಿಯಿಂದ ಪೂಜಿಸಲಾಯಿತು. ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್‌ ಡಿʼಸೌಜ ಮತ್ತು ಶಿಕ್ಷಕರು ಹಾಗೂ ಉಪನ್ಯಾಸಕರು ಆಚರಣೆಯಲ್ಲಿ ಭಾವಗಹಿಸಿದರು.

Saturday, November 1, 2025

ಸಿದ್ಧಗಂಗಾ ಸಂಸ್ಥೆಯಲ್ಲಿ ಸಂಭ್ರಮದ ರಾಜ್ಯೋತ್ಸವ.

 ನಗರದ ಸಿದ್ಧಗಂಗಾ ವಿದ್ಯಾಸಂಸ್ಥೆಯ ಶಾಲಾ-ಕಾಲೇಜಿನ ಮಕ್ಕಳು ಮತ್ತು ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ಪಾಲಕರು ಸೇರಿ70ನೇ ಕರ್ನಾಟಕ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿದರು.

ಸಿದ್ಧಗಂಗಾ ಪದವಿಪೂರ್ವ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಸದಾಶಿವ ಹೊಳ್ಳರವರು ಧ್ವಜಾರೋಹಣ ನೆರವೇರಿಸಿದರು. ಕರ್ನಾಟಕದ ಹಿರಿಮೆಯನ್ನು ತಿಳಿಸುತ್ತಾ ನಾಡಿಗಾಗಿ ಶ್ರಮಿಸಿದ ದಿಗ್ಗಜರನ್ನು ಸ್ಮರಿಸಿದರು. ಭಾರತ ಜನನಿಯ ತನುಜಾತೆ ಕರ್ನಾಟಕ ಮಾತೆಯ ವೈಭವವನ್ನು ವರ್ಣಿಸಿದರು.

70 ಮಕ್ಕಳಿಂದ “ಹಚ್ಚೇವು ಕನ್ನಡ ದೀಪ” ಗೀತೆಯನ್ನು ಸುಶ್ರಾವ್ಯವಾಗಿ ಪ್ರಸ್ತುತಪಡಿಸಲಾಯಿತು. ಅಕ್ಕಮಹಾದೇವಿ ಮತ್ತು ಬಸವಣ್ಣನವರ ವಚನಗಳನ್ನು ಸಿ.ಬಿ.ಎಸ್.ಇ ಎಲ್.ಕೆ.ಜಿ. ರಾಘವಿ ಮತ್ತು ಮನಿಷ್‌ ಗೌಡ ಹೇಳಿದರು. ಒಂದನೇ ತರಗತಿ ರಿಷಿಕ್‌ ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳ ಪರಿಚಯ ಮಾಡಿದರೆ, 2ನೇ ತರಗತಿ ತಾನ್ವಿ ಹರೀಶ್‌, ನಿದಾ ಫಾತಿಮ ಕಾದಂಬರಿಕಾರ ಎಸ್.‌ ಎಲ್.‌ ಭೈರಪ್ಪನವರ ಪರಿಚಯ ಮಾಡಿಕೊಟ್ಟರು. ಎಲ್.ಕೆ.ಜಿ. ರೇವಂತ್‌ ಆರ್ಯ ಮತ್ತು 8ನೇ ತರಗತಿ ಓಜಸ್‌ ರಾಜ್ಯೋತ್ಸವದ ಶುಭಾಷಯ ತಿಳಿಸಿದರು. ಪುಣಾಣಿ ಮಕ್ಕಳು ಜೋಗದ ಸಿರಿ ಬೆಳಕಿನಲ್ಲಿ ಹಾಡನ್ನು ಇಂಪಾಗಿ ಹಾಡಿದರು.

ಸಿ.ಬಿ.ಎಸ್.ಇ. 6ನೇ ತರಗತಿ ಮಕ್ಕಳು ಬಾರಿಸು ಕನ್ನಡ ಡಿಂಡಿಮ ಮತ್ತು ಕನ್ನಡ ಹೊನ್ನುಡಿ ದೇವಿಯನು ಪೂಜಿಸು ಹಾಡುಗಳಿಗೆ ಆಕರ್ಷಕ ನೃತ್ಯ ಮಾಡಿದರು. ನಾಡಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಸ್ವಾಗತ ಮತ್ತು ವಂದನಾರ್ಪಣೆ ಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ಜಸ್ಟಿನ್‌ ಡಿʼಸೌಜ ಮಾಡಿದರೆ, ಶಿಕ್ಷಕಿ ಆಶಾರವರು ಅಚ್ಚುಕಟ್ಟಾಗಿ ನಿರೂಪಣೆ ನಡೆಸಿಕೊಟ್ಟರು. ಸಂಸ್ಥೆಯ ಕಾರ್ಯದರ್ಶಿ ಹೇಮಂತ್‌ ಮತ್ತು ನಿರ್ದೇಶಕ ಡಾ|| ಜಯಂತ್‌ರವರು ಭಾಗವಹಿಸಿದ್ದರು. ಮಕ್ಕಳು ಹಳದಿ ಕೆಂಪು ಬಣ್ಣದ ವಸ್ತ್ರಗಳಲ್ಲಿ ಕಂಗೊಳಿಸಿದರು. ಸಂಗೀತ ಶಿಕ್ಷಕರು, ದೈಹಿಕ ಶಿಕ್ಷಕರು ರಾಜ್ಯೋತ್ಸವ ಕಾರ್ಯಕ್ರಮಕ್ಕೆ ವಿಶೇಷ ಕಳೆ ತಂದುಕೊಟ್ಟರು.