80ನೇ ಸ್ವಾತಂತ್ರ್ಯ ದಿನಾಚರಣೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ದಾವಣಗೆರೆಯ ಕ್ರೀಡಾಂಗಣದಲ್ಲಿ ಅರ್ಥಪೂರ್ಣವಾಗಿದ್ದವು. ಸ್ವಾತಂತ್ರ್ಯ ಸಂಗ್ರಾಮದ 250 ವರ್ಷಗಳ ಇತಿಹಾಸವನ್ನು ಕೆಲವೇ ನಿಮಿಷಗಳಲ್ಲಿ ಕಟ್ಟಿಕೊಟ್ಟ ನಗರದ ಸಿದ್ಧಗಂಗಾ ಸಂಸ್ಥೆಯ ವಿದ್ಯಾರ್ಥಿ – ವಿದ್ಯಾರ್ಥಿನಿಯರ ಅಮೋಘ ನೃತ್ಯ ರೂಪಕ “ಸಂಕೋಲೆಯಿಂದ ಸ್ವಾತಂತ್ರ್ಯದೆಡೆಗೆ” ಎಲ್ಲರ ಕಣ್ಣಲ್ಲಿ ನೀರು ಜಿನುಗುವಂತೆ ಮಾಡಿತು. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರು ನಡೆಸಿದ ದಬ್ಬಾಳಿಕೆ, ಹಿಂಸೆ, ಕ್ರೌರ್ಯ ಸ್ವಾತಂತ್ರ್ಯಾನಂತರದ 80 ವರ್ಷಗಳ ಸಂಭ್ರಮ ಎರಡನ್ನೂ ಅದ್ಭುತವಾಗಿ ಚಲನಚಿತ್ರ ಮಾದರಿಯಲ್ಲಿ ಕಟ್ಟಿಕೊಟ್ಟ ಈ ಮಕ್ಕಳು ನೆರೆದ ವೀಕ್ಷಕರಲ್ಲಿ ಸ್ವಾತಂತ್ರ್ಯಾಭಿಮಾನವನ್ನು ಉಕ್ಕಿಸಿದರು.
1857ರಲ್ಲಿ ಪ್ರಾರಂಭವಾದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮಳ ಸಿಂಹ ಘರ್ಜನೆ, ಝಾನ್ಸಿಯ ರಾಣಿ ಲಕ್ಷ್ಮೀಬಾಯಿಯ ಕೆಚ್ಚೆದೆಯ ಶೌರ್ಯ, ಸಿಪಾಯಿ ಮಂಗಲಪಾಂಡೆಯ ದಿಟ್ಟ ಉತ್ತರ, ಬಂದೂಕಿನ, ತೋಪಿನ ನಳಿಕೆಗೆ ಎದೆಯೊಡ್ಡಿ ನಿಂತ ಧೈರ್ಯ, ಶೌರ್ಯ ಕಣ್ಣಿಗೆ ಕಟ್ಟುವಂತೆ ಅಭಿನಯಿಸಿದ ಬಾಲಕರು ಎಲ್ಲರ ಚಪ್ಪಾಳೆ ಪಡೆದರು. ಹಂತ ಹಂತವಾಗಿ ನಡೆದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಾತ್ಮಗಾಂಧೀಜಿಯವರ ಅಹಿಂಸಾತ್ಮಕ ಹೋರಾಟ ಇತಿಹಾಸವನ್ನು ಮರು ಸೃಷ್ಠಿಸಿದಂತಿತ್ತು. ಜಲಿಯನ್ವಾಲಾಬಾಗ್ ಹತ್ಯಾಕಾಂಡ, ಸೈಮನ್ ಕಮಿಷನ್ ಜಾರಿಗೆ ಬರದಂತೆ ತಡೆದ ಲಾಲಾ ಲಜಪತರಾಯ್, ಉಪ್ಪಿನ ಸತ್ಯಾಗ್ರಹಕ್ಕಾಗಿ ನಡೆಸಿದ ದಂಡಿಯಾತ್ರೆ, ಕ್ವಿಟ್ ಇಂಡಿಯಾ ಚಳುವಳಿ, ಒಂದೊಂದು ದೃಶ್ಯವೂ ಮನಕಲಕುವಂತೆ ಇತ್ತು. ಅಸಹಕಾರ ಚಳುವಳಿಯಲ್ಲಿ ಗಾಯಗೊಂಡ, ಪ್ರಾಣಾರ್ಪಣೆಗೈದ ಅಸಂಖ್ಯಾತ ಅನಾಮಧೇಯ ಸ್ವಾತಂತ್ರ್ಯ ಸೇನಾನಿಗಳ ತ್ಯಾಗ, ಹಿಂಸೆಗೆ ತೊಡಗಿದವರಿಂದ ಶಸ್ತ್ರ ತ್ಯಾಗ, ಗಾಂಧೀಜಿಯವರ ಆಮರಣಾಂತ ಉಪವಾಸ ಊಹೆಗೂ ನಿಲುಕದಂತೆ ಸಿದ್ಧಗಂಗಾ ಸಂಸ್ಥೆಯ ಮಕ್ಕಳು ಭಾವಪೂರ್ಣವಾಗಿ ಅಭಿನಯಿಸಿದರು. ದೇಶ ವಿಭಜನೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರವನ್ನು ನೈಜವಾಗಿ ನಿರೂಪಿಸಿದರು.
1947ರ ಆಗಸ್ಟ್ 15 ರಂದು ಬ್ರಿಟಿಷ್ ಧ್ವಜ ಇಳಿಸಿ ಭಾರತದ ತ್ರಿವರ್ಣ ಧ್ವಜ ಹಾರಾಡಿದಾಗ ವೇದಿಕೆಯಲ್ಲಿದ್ದ ಗಣ್ಯರು ಎದ್ದು ನಿಂತು ಗೌರವ ಸಲ್ಲಿಸಿದರು. ಬ್ರಿಟೀಷರ ಆಗಮನದಿಂದ ಕಳೆದುಕೊಂಡಿದ್ದ ಶಾಂತಿ ಸಮೃದ್ಧಿ, ಸಂಪತ್ತು, ನೆಮ್ಮದಿ ಮರುಕಳಿಸಿತು. ಕ್ರೀಡಾಂಗಣದ ಉದ್ದಗಲಕ್ಕೂ ತ್ರಿವರ್ಣ ಧ್ವಜ ಹಾರಾಡಿದವು. ವಿವಿಧ ವೇಷ-ಭೂಷಣ ತೊಟ್ಟ ಬಾಲಕ – ಬಾಲಕಿಯರು “ಜೈ ಭಾರತ – ಜೈ ಕರ್ನಾಟಕ” ಎಂಬ ಸುಮಧುರ ಗೀತೆಯ ಮೂಲಕ ಅಖಂಡ ಭಾರತದ ಹೆಮ್ಮೆಯನ್ನು ವರ್ಣಿಸಿದರು. ಸರ್ಜಿಕಲ್ ಸ್ಟ್ರೈಕ್, ಪೆಹಲ್ಗಾಂವ್ ಘೋರ ಕೃತ್ಯಕ್ಕೆ ಆಪರೇಷನ್ ಸಿಂಧೂರ್ ಉತ್ತರ, ದೇಶದ ವಿಜ್ಞಾನ ಪ್ರಗತಿಯನ್ನು ತೋರಿಸುತ್ತಾ ಭಾರತದ ಎಲ್ಲ ಪ್ರಧಾನಿಗಳ ಭಾವಚಿತ್ರಗಳನ್ನು ಅನಾವರಣಗೊಳಿಸಿದರು. ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳನ್ನು ಪ್ರದರ್ಶಿಸಿ ಶ್ರದ್ಧಾಂಜಲಿ ಸಲ್ಲಿಸಿದರು.
20 ನಿಮಿಷಗಳ ಈ ಕಾರ್ಯಕ್ರಮ 350 ವರ್ಷಗಳ ಇತಿಹಾಸವನ್ನು ಮೆಲುಕುಹಾಕುವಂತೆ ಮಾಡಿತು. ಸಂಸ್ಥೆಯ ನಿರ್ದೇಶಕರಾದ ಡಾ|| ಜಯಂತ್ ಡಿ. ಎಸ್. ರವರ ನೇತೃತ್ವದಲ್ಲಿ, ಮಾರ್ಗದರ್ಶನದಲ್ಲಿ, ನಿರ್ದೇಶನದಲ್ಲಿ, ಸಾಹಿತ್ಯ, ಸಂಗೀತದಲ್ಲಿ ಮೂಡಿ ಬಂದ ಈ ಅತ್ಯದ್ಭುತ ಕಾರ್ಯಕ್ರಮ ಯುವ ಪೀಳಿಗೆಗೆ ಸ್ವಾತಂತ್ರ್ಯ ಹೋರಾಟದ ಪರಿಕಲ್ಪನೆ ಮೂಡಿಸಿ ದೇಶಾಭಿಮಾನವನ್ನು ಉಕ್ಕಿಸುವಲ್ಲಿ ಯಶಸ್ವಿಯಾಯಿತು. ಈ ನೃತ್ಯ ರೂಪಕಕ್ಕೆ ಪ್ರಥಮ ಬಹುಮಾನ ಘೋಷಣೆಯಾದಾಗ ಭಾಗವಹಿಸಿದ್ದ ಮಕ್ಕಳು, ಸಹಕರಿಸಿದ ಶಿಕ್ಷಕವೃಂದ ಹಾಗೂ ಪಾಲಕರು ಹರ್ಷೋದ್ಗಾರ ಮಾಡಿದರು. ಪ್ರೇಕ್ಷಕರು ವಿಸ್ಮಿತರಾಗಿ ಭಾವಾವೇಶದಲ್ಲಿ ಮಂತ್ರ ಮುಗ್ಧರಾದರು. ದೇಶಾಭಿಮಾನದ ತಲ್ಲಣದಿಂದ ರೋಮಾಂಚಿತರಾದರು. ಕಾಲಕ್ಕೆ ತಕ್ಕಂತ ವೇಷಭೂಷಣ, ಘಟನಾವಳಿಗಳನ್ನು ಚಿತ್ರಿಸುವ ಕಟೌಟ್ಗಳು, ಸನ್ನಿವೇಶ ನಿರೂಪಿಸುವ ಫಲಕಗಳು ಇತಿಹಾಸಕ್ಕೆ ಜೀವಂತಿಕೆ ನೀಡಿತು.





















