ದಾವಣಗೆರೆ, ಏ.5
ನಗರದ ಶ್ರೀ ಸಿದ್ಧಗಂಗಾ ಸಂಸ್ಥೆಯಲ್ಲಿ ಏರ್ಪಡಿಸಿದ ರಾಜ್ಯಮಟ್ಟದ ಪ್ರತಿಷ್ಠಿತ ಎಂ.ಎಸ್.ಎಸ್. ಕ್ವಿಜ್ಗೆ ರಾಜ್ಯದ ಎಲ್ಲ ಜಿಲ್ಲೆಗಳಿಂದ ಮಕ್ಕಳ ಮಹಾಪೂರ ಹರಿದು ಬಂದು ಅಭೂತಪೂರ್ವ ಯಶಸ್ಸು ಕಂಡಿತು. ಬೀದರ್ನಿಂದ ಚಾಮರಾಜನಗರದವರೆಗಿನ ಸುಮಾರು 8 ಸಾವಿರ ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಆಗಮಿಸಿದ್ದರು. 10ನೇ ತರಗತಿ ಪರೀಕ್ಷೆ ಬರೆದ ಮಕ್ಕಳಿಗಾಗಿ ಪರೀಕ್ಷೆ ಮುಗಿದ ನಂತರ ಪ್ರತೀ ವರ್ಷ ಏರ್ಪಡಿಸುವ ಈ ಲಿಖಿತ ಕ್ವಿಜ್ ಎರಡು ಹಂತಗಳಲ್ಲಿ ನಡೆಯಿತು. ಬೆಳಿಗ್ಗೆ 11:00 ರಿಂದ 12:30 ಮತ್ತು ಮಧ್ಯಾಹ್ನ 02:00 ರಿಂದ 03:30 ರವರೆಗೆ ಅತ್ಯಂತ ವ್ಯವಸ್ಥಿತವಾಗಿ ನಡೆದ ಈ ಕ್ವಿಜ್ ಕಾರ್ಯಕ್ರಮ ಎಲ್ಲರ ಮೆಚ್ಚುಗೆ ಪಡೆಯಿತು. ಸಿದ್ಧಗಂಗಾ ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಶಿಕ್ಷಣ ಶಿಲ್ಪಿ ಡಾ|| ಎಂ.ಎಸ್. ಶಿವಣ್ಣನವರ ಗೌರವಾರ್ಥ ಕಳೆದ 12 ವರ್ಷಗಳಿಂದ ಏರ್ಪಡಿಸುತ್ತಾ ಬಂದಿರುವ ಈ ಲಿಖಿತ ಕ್ವಿಜ್ನಲ್ಲಿ ಪ್ರಥಮ ಬಹುಮಾನವಾಗಿ 50 ಸಾವಿರ, ದ್ವಿತೀಯ ಬಹುಮಾನ 25 ಸಾವಿರ, ತೃತೀಯ ಬಹುಮಾನ 10 ಸಾವಿರ ಮತ್ತು ತಲಾ 1 ಸಾವಿರದಂತೆ 10 ಸಮಾಧಾನಕರ ಬಹುಮಾನ ಪಡೆಯುವರು. ಜೊತೆಗೆ ಪದವಿಪೂರ್ವ ವಿಜ್ಞಾನದ 2 ವರ್ಷಗಳ ಶಿಕ್ಷಣ ಉಚಿತವಾಗಿ ಪಡೆಯುವರು. ಇದಲ್ಲದೆ ಹೆಚ್ಚು ಅಂಕಗಳಿಸಿದ 100 ಮಕ್ಕಳಿಗೂ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಆಗಮಿಸಿದ 10 ಸಹಸ್ರಕ್ಕೂ ಹೆಚ್ಚು ಮಕ್ಕಳಿಗೆ, ಪಾಲಕರಿಗೆ ಮತ್ತು ಶಿಕ್ಷಕರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿʼಸೌಜ, ಅಧ್ಯಕ್ಷರಾದ ಪ್ರಶಾಂತ್. ಡಿ.ಎಸ್., ಕಾರ್ಯದರ್ಶಿ ಹೇಮಂತ್. ಡಿ.ಎಸ್., ನಿರ್ದೇಶಕರಾದ ಡಾ|| ಜಯಂತ್. ಡಿ.ಎಸ್. ಮತ್ತು ಡಾ|| ಪ್ರಿತೀಶ್ ಹಾಗೂ ಶಾಲಾ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಈ ಕಾರ್ಯಕ್ರಮವನ್ನು ಅತ್ಯಂತ ಶಿಸ್ತಿನಿಂದ ಯಶಸ್ವಿಯಾಗಿ ನಿರ್ವಹಿಸಿದರು.
94 ಕೊಠಡಿಗಳಲ್ಲಿ 188 ಸಿಬ್ಬಂದಿ ವರ್ಗದ ನೆರವಿನೊಂದಿಗೆ 600 ವಿದ್ಯಾರ್ಥಿಗಳ ಸ್ವಯಂಸೇವೆಯಿಂದ ವ್ಯವಸ್ಥೆಯಲ್ಲಿ ಕಿಂಚಿತ್ತೂ ಲೋಪವಾಗದಂತೆ ಬೆಳಿಗ್ಗೆ 07 ಗಂಟೆಯಿಂದ ಸಂಜೆ 05 ಗಂಟೆಯವರೆಗೆ ಈ ಐತಿಹಾಸಿಕ ಕಾರ್ಯಕ್ರಮ ನೆರವೇರಿತು. ಆಗಮಿಸಿದ ಎಲ್ಲ ವಿದ್ಯಾರ್ಥಿಗಳಿಗೆ 80 ಟ್ಯಾಬ್ಗಳ ಮೂಲಕ ಎಂ.ಎಸ್.ಎಸ್. ಕ್ವಿಜ್ ಪ್ರವೇಶ ಪತ್ರ ವಿತರಿಸಿ, ಸಂಬಂಧಪಟ್ಟ ಕೊಠಡಿಗಳಿಗೆ ಹಾಲಿ ಪಿ.ಯು.ಸಿ. ಓದುತ್ತಿರುವ ವಿದ್ಯಾರ್ಥಿಗಳು ಮಾರ್ಗದರ್ಶನ ನೀಡಿದರು. ದೂರದೂರಿನಿಂದ ಆಗಮಿಸಿದವರಿಗೆ ಬಸ್ ನಿಲ್ದಾಣ ಮತ್ತು ರೇಲ್ವೇ ಸ್ಟೇಷನ್ನಿಂದ ಸಂಸ್ಥೆಯವರೆಗೆ ಶಾಲಾ ಬಸ್ಗಳಲ್ಲಿ ಕರೆತರಲು ವ್ಯವಸ್ಥೆ ಮಾಡಲಾಗಿತ್ತು. ಸಂಸ್ಥೆಯ ಅಧ್ಯಕ್ಷರಾದ ಪ್ರಶಾಂತ್ ರವರ ತಾಂತ್ರಿಕ ನಿಪುಣತೆಯಿಂದಾಗಿ ಅಗಾಧ ಸಂಖ್ಯೆಯಲ್ಲಿ ಆಗಮಿಸಿದ ವಿದ್ಯಾರ್ಥಿಗಳ ನೊಂದಣಿಗೆ ಯಾವ ಹಂತದಲ್ಲೂ ತೊಡಕಾಗಲಿಲ್ಲ. ಡಾ|| ಜಯಂತ್ರವರು ಎಂ.ಎಸ್.ಎಸ್. ಕ್ವಿಜ್ ಮತ್ತು ಎಂ.ಎಸ್.ಎಸ್. ಸ್ಕಾಲರ್ಶಿಪ್ ಬಗ್ಗೆ ಮಾಹಿತಿ ನೀಡಿದರು. ಡಾ|| ಪ್ರೀತಿಶ್, ಮನೋಹರ್ ನೂಜಾಡಿ, ಹರ್ಷ ಸಿ. ಗುಂಟನೂರು, ಜರೀನ್ ತಾಜ್ ಎಂ.ಡಿ., ವಿಜಯಶ್ರೀ ಬಿ.ಸಿ. ಮತ್ತು ಕವಿತಾ ಹೆಚ್. ಇವರು ಪ್ರಶ್ನೆ ಪತ್ರಿಕೆ ನಿರ್ವಹಣೆ ಮತ್ತು ವಿತರಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದರು. ಕಾರ್ಯದರ್ಶಿ ಹೇಮಂತ್ರವರು ಹಿರಿಯ ವಿದ್ಯಾರ್ಥಿಗಳ ಮತ್ತು ಸ್ನೇಹಿತರ ಸಹಕಾರದಿಂದ ಹಾಗೂ ಶಾಲೆಯ ಗಣಕಯಂತ್ರದ ತಜ್ಞ ತಂಡದವರ ಅವಿರತ ಶ್ರಮ ಮೇಳೈಸಿ ಕ್ವಿಜ್ ಕಾರ್ಯಕ್ರಮ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಸಂಸ್ಥೆಯ ಮುಖ್ಯಸ್ಥರಾದ ಜಸ್ಟಿನ್ ಡಿʼಸೌಜ ಸಹಕರಿಸಿದ ಎಲ್ಲರನ್ನೂ ವಂದಿಸಿದರು.